ಭಾನುವಾರ, ಜೂನ್ 2, 2024

ವಿಧಾನಪರಿಷತ್ ಚುನಾವಣೆ : ಕಾಂಗ್ರೆಸ್ ಪಕ್ಷದಿಂದ ಬಲ್ಕೀಶ್ ಬಾನುಗೆ ಅವಕಾಶ

ಬಲ್ಕೀಶ್ ಬಾನು
    ಭದ್ರಾವತಿ: ಶಿಕ್ಷಕಿ ವೃತ್ತಿ ತೊರೆದು ಸುಮಾರು ೩ ದಶಕಗಳಿಗೂ ಹೆಚ್ಚಿನ ಕಾಲ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುವ ಮೂಲಕ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ನಗರದ ಅನ್ವರ್ ಕಾಲೋನಿ ನಿವಾಸಿ ಬಲ್ಕೀಶ್ ಬಾನು ಅವರಿಗೆ ಇದೀಗ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿ ಕೊಡಲಾಗಿದೆ.
    ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಒಟ್ಟು ೮ ಜನರಿಗೆ ಅವಕಾಶ ನೀಡಲಾಗಿದ್ದು, ಜಿಲ್ಲೆಯಿಂದ ಬಲ್ಕೀಶ್ ಬಾನು ಅವರಿಗೆ ಅವಕಾಶ ನೀಡಲಾಗಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ ಸಂಖ್ಯಾ ಬಲದ ಆಧಾರದ ಮೇಲೆ ಬಲ್ಕೀಶ್ ಬಾನು ಆಯ್ಕೆ ಯಾಗುವುದು ಬಹುತೇಕ ಖಚಿತವಾಗಿದೆ.
    ಬಲ್ಕೀಶ್ ಬಾನು ಪರಿಚಯ :
    ಜಿಲ್ಲೆಯ ರಾಜಕಾರಣದಲ್ಲಿ ಬಲ್ಕಿಶ್ ಬಾನು ಅವರ ಹೆಸರು ತುಂಬಾ ಚಿರಪರಿಚಿತ. ಖಾಸಗಿ ಶಾಲೆಯಲ್ಲಿ ಸಾಮಾನ್ಯ ಶಿಕ್ಷಕಿಯಾಗಿದ್ದ ಇವರು ರಾಜಕೀಯ ಕ್ಷೇತ್ರದಲ್ಲಿ ಜಿಲ್ಲೆಯ ಬಹಳಷ್ಟು ಘಟಾನುಘಟಿ ನಾಯಕರನ್ನು ಹಿಂದಿಕ್ಕಿ ಬೆಳೆದ ಪರಿ ಎಂತಹವರನ್ನು ಆಶ್ಚರ್ಯಗೊಳಿಸುತ್ತದೆ.
    ೧೯೮೭ರಲ್ಲಿ ನಡೆದ ಜಿಲ್ಲಾ ಪರಿಷತ್ ಚುನಾವಣೆಯಿಂದ ತಮ್ಮ ರಾಜಕೀಯ ಪರ್ವ ಆರಂಭಿಸಿದ ಬಲ್ಕೀಶ್ ಬಾನು ಮೊದಲ ಯತ್ನದಲ್ಲೇ ಜಿಲ್ಲಾ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾದರು. ೧೯೮೯ ರಿಂದ ೧೯೯೨ ರವರೆಗೆ ರಾಜ್ಯ ಗ್ರಾಹಕದ ಹಿತರಕ್ಷಣಾ ಸಮಿತಿಯಸದಸ್ಯರಾದರು. ೧೯೯೫ ರಲ್ಲಿ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪುನಃ ಆಯ್ಕೆಯಾದರು.
    ಅದೇ ಸಂದರ್ಭದಲ್ಲಿ ರಾಜ್ಯದಲ್ಲಿ ಜನತಾ ಪರಿವಾರದ ಸರ್ಕಾರ ರಚನೆಯಾಗಿತ್ತು. ಶಿವಮೊಗ್ಗ ಜಿಲ್ಲೆಯವರೇ ಆದ ಜೆ.ಎಚ್ ಪಟೇಲ್ ಮುಖ್ಯಮಂತ್ರಿಯಾದರು. ಇದು ಬಲೀಶ್ ಭಾನುರವರ ರಾಜಕೀಯ ಜೀವನದಲ್ಲಿ ಹೊಸ ತಿರುವು ಪಡೆಯಲು ಕಾರಣವಾಯಿತು. ೧೯೯೫ ರಿಂದ ೯೭ ರವರೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ದುಡಿದು ಮನೆಮಾತಾದರು.
    ಅದೇ ಸಂದರ್ಭದಲ್ಲಿ ಕ್ರೀಡಾ ಪ್ರಾಧಿಕಾರದ ಸದಸ್ಯರಾಗಿ ಅಮೇರಿಕಾದ ಆಟ್ಲಾಂಟಾದಲ್ಲಿ ನಡೆದ ಒಲಂಪಿಕ್ ಕ್ರೀಡಾಕೂಟದಲ್ಲಿ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಒತ್ತಾಯಿಸಿ ೧೯೯೬ರಲ್ಲಿ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಲು ಮಹಿಳಾ ನಿಯೋಗದ ನೇತೃತ್ವ ವಹಿಸಿದ್ದ ಇವರು ೧೯೯೭ ರಿಂದ ೨೦೦೦ ರವರೆಗೆ ರಾಜ್ಯ ವಕ್ಫ್ ಫೌಂಡೇಷನ್ ಮಹಿಳಾ ಅಭಿವೃದ್ಧಿ ಸದಸ್ಯೆಯಾಗಿ ಸೇವೆ ಸಲ್ಲಿಸಿದರು. ಈ ನಡುವೆ ಶಿವಮೊಗ್ಗ ದಿಂದ ಎಂ.ಎಲ್.ಸಿ ಚುನಾವಣೆಗೆ ಸ್ಪರ್ಧಿಸಿದ್ದರು.
    ಕೆಪಿಸಿಸಿ ಸದಸ್ಯೆಯಾಗಿ, ಕೆಪಿಸಿಸಿ ಮಹಿಳಾ ವಿಭಾಗದ ಸಹಕಾರ್ಯದರ್ಶಿಯಾಗಿ, ಕೆಪಿಸಿಸಿ ಮೈನಾರಿಟಿ ಸೆಲ್‌ನ ಕಾಯಂ ಆಹ್ವಾನಿತರಾಗಿ, ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ನಂತರ ಇವರನ್ನು ಪಕ್ಷದ ಮುಖಂಡರು ಎಐಸಿಸಿ ಸದಸ್ಯೆಯಾಗಿ ನೇಮಕಗೊಳಿಸಿದರು.
    ೨೦೧೪ರಲ್ಲಿ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಶ್ರಮವಹಿಸಿ ಕಾರ್ಯನಿರ್ವಹಿಸಿದರು. ಇದನ್ನು ಮನಗಂಡು ಪಕ್ಷದ ಅಂದಿನ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಿರ್ದೇಶನದ ಮೇರೆಗೆ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಾಗೂ ಪಕ್ಷದ ಮುಖಂಡರುಗಳು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರನ್ನಾಗಿ ನೇಮಕಗೊಳಿಸಿದ್ದರು.  
    ಹಲವು ಬಾರಿ ವಿಧಾನಸಭೆ ಚುನಾವಣೆಗೆ ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದರು. ಆದರೆ ಅವಕಾಶ ಲಭಿಸಿರಲಿಲ್ಲ. ಇದೀಗ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ವಿಐಎಸ್‌ಎಲ್ ಕಾರ್ಖಾನೆಯಲ್ಲಿ ವಿಶ್ವ ಪರಿಸರ ದಿನಾಚರಣೆ : ಸಾರ್ವಜನಿಕರಿಗೆ ಉಚಿತ ಸಸಿ ವಿತರಣೆ

  ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಸಸ...