ಭದ್ರಾವತಿ ನಗರದ ಉಜ್ಜನಿಪುರದಲ್ಲಿ ಡಾನ್ ಬೋಸ್ಕೊ ಕೈಗಾರಿಕಾ ಸಂಸ್ಥೆಯಲ್ಲಿ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭದ್ರಾವತಿ: ವೇಗದ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಳವಾಗುತ್ತಿದ್ದು, ಇದು ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ. ಈ ಬಗ್ಗೆ ಸರ್ವರಿಗೂ ಜಾಗೃತಿ ಅಗತ್ಯ ಎಂದು ಡಾನ್ ಬೋಸ್ಕೊ ಕೈಗಾರಿಕಾ ಸಂಸ್ಥೆ ನಿರ್ದೇಶಕ ಫಾದರ್ ಕ್ರಿಸ್ತೊ ರಾಜ್ ಹೇಳಿದರು.
ನಗರದ ಉಜ್ಜನಿಪುರದಲ್ಲಿ ಡಾನ್ ಬೋಸ್ಕೊ ಕೈಗಾರಿಕಾ ಸಂಸ್ಥೆಯಲ್ಲಿ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುರುವಾರ ಆಯೋಜಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಹಳಷ್ಟು ಖಾಯಿಲೆಗಳಿಗೆ ಪ್ಲಾಸ್ಟಿಕ್ ಬಳಕೆ ಹೆಚ್ಚಳ ಕಾರಣ. ಪರಿಸರ ನಾಶದಿಂದ ಜನಜೀವನ ದುಷ್ಪರಿಣಾಮ ಎದುರಿಸುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಬೇರೆಯವರಿಂದ ಪರಿಸರ ಸಂರಕ್ಷಣೆಯನ್ನು ನಿರೀಕ್ಷಿಸದೆ ಸ್ವಯಂ ಪ್ರೇರಣೆಯಿಂದ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಮೈಸೂರು ಕಾಗದ ಕಾರ್ಖಾನೆ ಕಾರ್ಮಿಕ ಸಂಘದ ಅಧ್ಯಕ್ಷ ಧರ್ಮಲಿಂಗಸ್ವಾಮಿ ಮಾತನಾಡಿ, ಬಾಲ್ಯದಿಂದಲೇ ಯಾರಿಗೂ ಪರಿಸರದ ಕಾಳಜಿ ಇರುವುದಿಲ್ಲ. ನಾವು ಬೆಳೆದಂತೆ ನಮ್ಮಲ್ಲಿ ಪರಿಸರ ಕಾಳಜಿಯನ್ನೂ ಬೆಳೆಸಿಕೊಳ್ಳಬೇಕು. ಪರಿಸರ ರಕ್ಷಣೆ ಮತ್ತು ಪ್ಲಾಸ್ಟಿಕ್ ಬಳಕೆಯ ತಡೆ ವಿಚಾರವನ್ನು ವಿದ್ಯಾರ್ಥಿಗಳು ಜವಾಬ್ದಾರಿ ಎಂದು ಭಾವಿಸಬೇಕು ಎಂದರು.
ಪೋಷಕರು ಮಕ್ಕಳಲ್ಲಿ ವಿದ್ಯೆಯ ಬಗ್ಗೆ ಅರಿವು ಮೂಡಿಸಿದಂತೆಯೇ ಪರಿಸರದ ಜಾಗೃತಿಯನ್ನು ಮೂಡಿಸುವುದು ಪೋಷಕರ ಕರ್ತವ್ಯ. ಪರಿಸರ ರಕ್ಷಣೆ ಬಗ್ಗೆ ಕೇವಲ ಮಾತುಗಳಿಂದ ಉಪಯೋಗವಿಲ್ಲ. ಮನೆಯಿಂದಲೇ ಪರಿಸರ ರಕ್ಷಣೆಯ ಅರಿವು ಮೂಡಬೇಕು. ಆಗ ಮಾತ್ರ ಉತ್ತಮ ಪರಿಸರ ಕಾಣಲು ಸಾಧ್ಯ ಎಂದರು
ಕಾಂಗ್ರೆಸ್ ಮುಖಂಡ ಮಹಮದ್ ರಫಿ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಇಕೋ ಕ್ಲಬ್ ಸದಸ್ಯರು ಪಾಲ್ಗೊಂಡಿದ್ದರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ